ಹಾಸ್ಟೆಲ್ ನಲ್ಲಿ ಹುಡುಗರು ಯಾವ ರೀತಿ ಚೇಷ್ಟೆ ಮಾಡಿಕೊಂಡಿರ್ತಾರೆ, ವಾರ್ಡನ್ ಗೆ ಹೇಗೆಲ್ಲಾ ಯಾಮಾರಿಸ್ತಾರೆ, ಅವರ ಹುಡುಗಾಟಿಕೆ ಹೇಗಿರತ್ತೆ ಎಂಬುದನ್ನು ಸಂಪೂರ್ಣ ಹಾಸ್ಯಮಯವಾಗಿ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ತೆರೆಮೇಲೆ ನಿರೂಪಿಸಿದ್ದಾರೆ, ಕನ್ನಡದಲ್ಲಿ ಹಾಸ್ಟೆಲ್ ಹುಡುಗರ ಬಗ್ಗೆ ಸಿನಿಮಾಗಳು ಬಂದಿರುವುದು ವಿರಳ, ಹಾಗಾಗಿ ಈ ಚಿತ್ರ ಬಹುಬೇಗನೇ ಪ್ರೇಕ್ಷಕರನ್ನು ತಲುಪುತ್ತದೆ, ಸಾವಿರಾರು ವಿದ್ಯಾರ್ಥಿಗಳಿರುವ ತುಂಗಾ ಹಾಸ್ಟೆಲ್ ನಲ್ಲಿ ಒಂದು ರಾತ್ರಿ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇಲ್ಲಿ ಆ ಹುಡುಗರ ಆಟ, ತುಂಟಾಟ, ತರಲೆ, ತಮಾಷೆ ಇದೆಲ್ಲ ಸಿನಿಮಾದಲ್ಲಿದೆ. ನಿರ್ದೇಶಕನಾಗಬೇಕೆಂದು ಕನಸು ಕಾಣುತ್ತಿದ್ದ ವಿದ್ಯಾರ್ಥಿ ಅಜಿತ್ (ಪ್ರಜ್ವಲ್ ಬಿ.ಪಿ.) ಕಿರುಚಿತ್ರಕ್ಕಾಗಿ ಕಥೆ ರೆಡಿ ಮಾಡಿಕೊಂಡು ಅದನ್ನು ಸ್ನೇಹಿತರಿಗೆ ವಿವರಿಸುತ್ತಾನೆ. ಆ ಹಾಸ್ಟೆಲ್ನ ವಾರ್ಡನ್ (ಮಂಜುನಾಥ ನಾಯಕ್) ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆ ಹೆಣವನ್ನು ಹೊರಗೆ ಸಾಗಿಸಲು ವಿದ್ಯಾರ್ಥಿಗಳು ಮಾಡೋ ಸಾಹಸವೇ ಆ ಶಾರ್ಟ್ ಫಿಲಂ ಕಥೆ. ಆದರೆ ಆತ ಕಥೆಯಲ್ಲಿ ಹೇಳಿದಂತೇ ಮುಂದಿನ ಘಟನೆಗಳು ನಡೆಯುತ್ತ. ಹೋಗುತ್ತವೆ, ವಾರ್ಡನ್ ನಿಜವಾಗಿಯೂ ಸತ್ತು ಹೋಗಿರುತ್ತಾನೆ. ಮುಂದೆ ಏನೇನೆಲ್ಲ ನಡೆಯುತ್ತದೆ ಅನ್ನೋದು ಈ ಚಿತ್ರದ ಕಥಾಹಂದರ.
ಗಣಿತದ ಲೆಕ್ಚರರ್ ಆಗಿ ನಟಿ ರಮ್ಯಾ ಮೊದಲ ದೃಶ್ಯದಲ್ಲೇ ಕಾಣಿಸಿಕೊಂಡಿದ್ದಾರೆ. ನಂತರ ಕಥೆ ಹಾಸ್ಟೆಲ್ ಒಳಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿಂದ ಮುಂದೆ ನಡೆಯುವ ಕಥೆಯಲ್ಲಿ ನೋಡುಗರಲ್ಲಿ ಒಂದಷ್ಟು ಗೊಂದಲ ಸೃಷ್ಟಿಸಿ ನಂತರ ಅದಕ್ಕೆ ಪರಿಹಾರವನ್ನೂ ಹೇಳುತ್ತ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಹಾಸ್ಟೆಲ್ ಹುಡುಗರ ನಡುವೆ ಏನೇನೆಲ್ಲ ಕಾಮಿಡಿ ಪ್ರಹಸನ ನಡೆಯುತ್ತೆ ಎಂಬುದನ್ನು ತುಂಬಾ ನೈಜವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಅವರು ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟಾಗಿ ಕೊನೆಗೆ ಎಲ್ಲವೂ ಸುಖಾಂತ್ಯ ಕಾಣುತ್ತದೆ. ಹಾಸ್ಟೆಲ್ ಒಳಗೆ ಹೊರಗೆ ಒಂದೇ ರಾತ್ರಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ.
ಹಾಸ್ಟೆಲ್ ಹುಡುಗರ ಹಾಡು, ಪಾಡು, ಜೂನಿಯರ್ಸ್ ಗೆ ಸೀನಿಯರ್ಗಳು ನೀಡುವ ಕ್ವಾಟ್ಲೆ, ಜಟಾಪಟಿ ಎಲ್ಲವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹಾಸ್ಟೆಲ್ನಲ್ಲಿ ಇರುವವರಿಗೆ, ಇದ್ದು ಹೊರಬಂದಿರುವವರಿಗೆ ಈ ಸಿನಿಮಾ ಬಹಳ ಆಪ್ತವಾಗಲಿದೆ. ಚಿತ್ರದಲ್ಲಿ ಅಭಿನಯಿಸಿದವರಲ್ಲಿ ಬಹುತೇಕರು ಹೊಸಬರು. ಇದು ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ನಡೆಯುವ ಕಥೆ. ಹಾಗಾಗಿ ಇಲ್ಲಿ ನಾಯಕ, ನಾಯಕಿ ಅನ್ನೋ ಕಾನ್ಸೆಪ್ಟ್ ಇಲ್ಲ. ಇನ್ನು ಹಾಸ್ಟೆಲ್ ವಾರ್ಡನ್ ಆಗಿ ಮಂಜುನಾಥ್ ನಾಯಕ್ ನೆನಪಲ್ಲುಳಿಯುತ್ತಾರೆ. ನಿರ್ದೇಶಕ ರಿಶಭ್ ಶೆಟ್ಟಿ , ಪವನ್ ಕುಮಾರ್, ದಿಗಂತ್ ಒಂದರೆಡು ಸೀನ್ಗಳಲ್ಲಿ ಬಂದು ಅಚ್ಚರಿ ಮೂಡಿಸುತ್ತಾರೆ. ನೂರಾರು ಹುಡುಗರನ್ನು ಒಂದೆಡೆ ಸೇರಿಸಿ ಚಿತ್ರೀಕರಣ ಮಾಡುವುದು ಸುಲಭವಲ್ಲ. ಆ ಪ್ರಯತ್ನದಲ್ಲಿ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಸಕ್ಸಸ್ ಆಗಿದ್ದಾರೆ. ಸೀನಿಯರ್ ಜಿನ್ನಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇನ್ನು ಎಡಿಟರ್ ಪಾತ್ರದಲ್ಲಿ ದಿಗಂತ್ ಸಖತ್ ನಗಿಸುತ್ತಾರೆ. ಚಿತ್ರದ ಹೈಲೈಟ್ ಅಂದರೆ ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ವರ್ಕ್.